🌺 ज्ञानं विज्ञानसहितं यज्ज्ञात्वा मोक्ष्यसेऽशुभात्।🌺

ಪಕ್ಷಕ್ಕೊಂದು ಪುರಾಣ-3 ಭವಿಷ್ಯಪುರಾಣ

 



ಪಕ್ಷಕ್ಕೊಂದು ಪುರಾಣ - 3   ಭವಿಷ್ಯಪುರಾಣ 


ಪುರಾಣಪ್ರಪಂಚದಲ್ಲಿ ಮಾನವನ ನಿತ್ಯಜೀವನಕ್ಕೆ ಅತ್ಯಂತ ಹತ್ತಿರವಾದ ಪುರಾಣ ಈ ಭವಿಷ್ಯಪುರಾಣ. ಇಂದಿನ ಪ್ರಸಕ್ತ ಕಾಲಘಟ್ಟದಲ್ಲಿ ಮಾನವನ ಚರ್ಯೆ ಚಟುವಟಿಕೆಗಳು ಹೇಗಿರಬೇಕು? ಎಂಬುದನ್ನು ಅತ್ಯಂತ ವ್ಯವಸ್ಥಿತವಾಗಿ ತಿಳಿಸಿಕೊಡುವ ಈ ಪುರಾಣ ತೀರಾ ಜನಜನಿತವಲ್ಲದಿದ್ದರೂ ಇದರ ಅನೇಕ ಶ್ಲೋಕಗಳು ಸುಭಾಷಿತಗಳಾಗಿ, ಪ್ರಸಿದ್ಧ ಗಾದೆಮಾತುಗಳಾಗಿ ಜನರ ಜೀವನದಲ್ಲಿ ಹಾಸುಹೊಕ್ಕಾಗಿದೆ. ಈ ಪುರಾಣದಲ್ಲಿ ಬರುವ ವಿಕ್ರಮಬೇತಾಳ ಕಥೆ,  "ಬೇತಾಳ-ಪಂಚವಿಂಶತಿ" ಎಂಬ ಸಂಸ್ಕೃತದ ಪ್ರಸಿದ್ಧ ಗ್ರಂಥಕ್ಕೆ ಮೂಲ ಸೆಲೆ. . ಭವಿಷ್ಯ ಪುರಾಣದ ಸಮರ್ಪಕ ಪುಸ್ತಕಗಳು ಇನ್ನೂ ಸಹ ಲಭ್ಯವಿಲ್ಲ. ಈಗ ಲಭ್ಯವಿರುವ ಹಲವು ಹಸ್ತಪ್ರತಿಗಳನ್ನು ಸೇರಿಸಿ ಒಂದು ಪುರಾಣಗ್ರಂಥವಾಗಿ ಮಾರ್ಪಡಿಸಲಾಗಿದೆ.  

     ಸ್ಕಾಂದಂ ಶತಸಹಸ್ರಂ ತು ಲೋಕಾನಾಂ ಜ್ಞಾತಮೇವ ಹಿ।

     ಭವಿಷ್ಯಮೇದದೃಷಿಣಾ ಲಕ್ಷಾರ್ಧಂ ಸಂಖ್ಯಯಾ ಕೃತಮ್ ।।

ಈ ಶ್ಲೋಕದ ಪ್ರಕಾರ ಭವಿಷ್ಯಪುರಾಣದಲ್ಲಿ 50 ಸಾವಿರ ಶ್ಲೋಗಳು ಇವೆ ಎಂಬುದು ತಿಳಿದುಬರುತ್ತದೆ. ಇನ್ನು ದೇವೀ ಭಾಗವತದ ವಾಕ್ಯವೊಂದು "ಚತುರ್ದಶ ಸಹಸ್ರಾಣಿ ತಥಾ ಪಂಚಶತಾನಿ ಚ। ಭವಿಷ್ಯಾಂ  ಪರಿಸಂಖ್ಯಾತಂ ಮುನಿಭಿಃ ತತ್ವದರ್ಶಿಭಿ" ಎಂದು ಹೇಳುತ್ತದೆ. ಇದರ ಪ್ರಕಾರ 14 ಸಾವಿರ ಶ್ಲೋಕಗಳಿವೆ ಎಂಬುದು ತಿಳಿದುಬರುತ್ತದೆ. ಆದರೆ ಪ್ರಸ್ತುತ ಮುದ್ರಿತವಾಗಿ ಪ್ರಕಟವಾಗಿರುವ ಹಲವು ಪುಸ್ತಕಗಳಲ್ಲಿ ಸರಿಸುಮಾರು 26 ಸಾವಿರ ಶ್ಲೋಕಗಳು ದೊರೆಯುತ್ತವೆ. ಉಳಿದ ಶ್ಲೋಕಗಳ ಬಗ್ಗೆ ವಿದ್ವಾಂಸರು ಅನೇಕವಿಧವಾದ ಅಭಿಪ್ರಾಯವನ್ನೂ ಹೊಂದಿದ್ದಾರೆ. ಇಲ್ಲಿ ಅದು ಅಪ್ರಸ್ತುತ. 

    ಪರ್ವಾಣಿ ಚಾತ್ರ ವೈ ಪಂಚ ಕೀರ್ತಿತಾನಿ ಸ್ವಯಂಭುವಾ ।

  ಪ್ರಥಮಂ ಕಥ್ಯತೇ ಬ್ರಾಹ್ಮಂ ದ್ವೀತೀಯಂ ವೈಷ್ಣವಂ ಸ್ಮೃತಂ ।।

  ತೃತೀಯಂ ಶೈವಮಾಖ್ಯಾತಂ ಚತುರ್ಥಂ ತ್ವಾಷ್ಟ್ರಮುಚ್ಯತೇ।।

 ಪಂಚಮಂ ಪ್ರತಿಸರ್ಗಾಖ್ಯಂ ಸರ್ವಲೋಕೈಃ ಸುಪೂಜಿತಮ್ ।। 

ಭವಿಷ್ಯಪುರಾಣದಲ್ಲಿ ಬ್ರಾಹ್ಮ, ವೈಷ್ಣವ, ಶೈವ, ತ್ವಾಷ್ಟ್ರ ಮತ್ತು ಪ್ರತಿಸರ್ಗವೆಂಬ ಐದು ಪರ್ವಗಳು ಇವೆ. ಆದರೆ ಈಗ ದೊರೆತಿರುವ ಭವಿಷ್ಯಪುರಾಣದ ಮೂಲ ಪ್ರತಿಗಳಲ್ಲಿ ಕೇವಲ ನಾಲ್ಕು ಪರ್ವಗಳು ಮಾತ್ರ ಕಂಡುಬರುತ್ತವೆ. ಭಗವಾನ್ ವ್ಯಾಸ ಮಹರ್ಷಿಗಳ ಪ್ರಧಾನ ನಾಲ್ವರು ಶಿಷ್ಯರಲ್ಲಿ ಒಬ್ಬರಾದ ವೇದಪ್ರವರ್ತಕರಲ್ಲಿ ಪ್ರಮುಖರದ ಸುಮಂತು ಮಹರ್ಷಿಗಳು ಈ ಭವಿಷ್ಯ ಪುರಾಣವನ್ನು ಶತಾನೀಕ ರಾಜನಿಗೆ ಉಪದೇಶಸಿದರು.

    ಮೊದಲ ಬ್ರಾಹ್ಮಪರ್ವದಲ್ಲಿ ಸೃಷ್ಟಿವರ್ಣನೆ, ವಿವಾಹ, ಗರ್ಭಾಧಾನ, ಮೊದಲಾದ ಸಂಸ್ಕಾರಗಳ ವಿಚಾರ, ಚಾತುರ್ವರ್ಣವ್ಯವಸ್ಥೆ, ಚತುರಾಶ್ರಮ ವ್ಯವಸ್ಥೆ, ಮುಂತಾದ ವಿಷಯಗಳು ಚರ್ಚಿಸಲ್ಪಟ್ಟಿವೆ. ಮುಂದೆ ವೈಷ್ಣವವೇ ಮೂದಲಾದ ಮೂರು ಪರ್ವಗಳಲ್ಲಿ ಭಾರತದ ಇತಿಹಾಸದಲ್ಲಿ ಬಂದು ಹೋಗಿರುವ ಅನೇಕ ಅರಸುಮನೆತನಗಳ ವೃತ್ತಾಂತ ಬರುತ್ತದೆ. ಹೂಣರು, ಕುಷಾಣರೂ, ಮಹಮ್ಮದೀಯ ಪಂಗಡಗಳ ಆಕ್ರಮಣದ ವಿಷಯಗಳೂ ಈ ಭಾಗದಲ್ಲಿ ವಿವರಿತವಾಗಿದೆ. ವಿಶೇಷವಾಗಿ ಕೆರೆ, ಬಾವಿ, ಉದ್ಯಾನಗಳು,ಉಂತಾದವುಗಳನ್ನು ನಿರ್ಮಾಣಮಾಡುವ ಕ್ರಮವನ್ನೂ, ವಾಸ್ತುಶಾಸ್ತ್ರದ ವಿಷಯಗಳನ್ನೂ  ತಿಳಿಸಲಾಗಿದೆ. ಅನೇಕ ವಿಧವಾದ ಮತಭೇದಗಳು, ನಾನಾಮತಾಚಾರ್ಯರುಗಳ ಅವತರಣ, ಅವರ ಜೀವನ ಹಾಗೂ ಅವರ ಮತಗಳ ಸಂಕ್ಷಿಪ್ತ ಪರಿಚಯವನ್ನು ಭವಿಷ್ಯಪುರಾಣ ತಿಳಿಸುತ್ತದೆ. ಭವಿಷ್ಯಪುರಾಣವು ಸೂರ್ಯದೇವತಾ ಆರಾಧನೆಗೆ ಬಹಳ ಮಹತ್ವವನ್ನು ನೀಡುತ್ತದೆ. ಬ್ರಾಹ್ಮ ಪರ್ವದ ಕೊನೆಯಲ್ಲಿ ಸೂರ್ಯವ್ರತ ಹಾಗೂ ಸೂರ್ಯ ಉಪಾಸನಾಕ್ರಮ ಬಹು ವಿಸ್ತಾರವಾಗಿ ನಿರೂಪಿತವಾಗಿದೆ. ಈ ಪುರಾಣದ ಪ್ರತಿಸರ್ಗಪರ್ವದಲ್ಲಿ ಅನೇಕ ಚಿಕ್ಕಪುಟ್ಟ ಕಥೆಗಳು ಇದ್ದು, ಅವುಗಳು ಜೀವನಮೌಲ್ಯವನ್ನು ಬೋಧಿಸುತ್ತವೆ. 

      ಅನೇಕ ವಿಶಿಷ್ಠವಾದ ಧರ್ಮಶಾಸ್ತ್ರೀಯವಾದ ಅಂಶಗಳನ್ನೂ ನಾವಿಲ್ಲಿ ಕಾಣಬಹುದುದು. ಮನುಸ್ಮೃತಿಯ ಕೆಲವು ಶ್ಲೋಕಗಳು ಭವಿಷ್ಯಪುರಾಣದಲ್ಲಿ ಯಥಾವತ್ತಾಗಿ ಗೋಚರಿಸುವುದು ವಿಸ್ಮಯಕರವಾದ ಅಂಶವೇ ಆಗಿದೆ. 

     ಈ ಭವಿಷ್ಯಪುರಾಣ ಹದಿನೆಂಟು ಮಹಾಪುರಾಣಗಳ ಸಾಲಿನಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ಪ್ರಸ್ತುತ ಅನೇಕ ಮಹನೀಯರು ,ವಿದ್ವಾಂಸರು, ಇತಿಹಾಸತಜ್ಞರೂ ಈ ಭವಿಷ್ಯಪುರಾಣದ ಬಗ್ಗೆ ಇನ್ನೂ ಸಂಶೋಧನೆಯನ್ನು ನಡೆಸುತ್ತಿದ್ದಾರೆ. 

    ಇದು ಭವಿಷ್ಯಪುರಾಣದ ಕಿರುಪರಿಚಯ.

ಲೇಖನ - ವಿ. ರವಿಶಂಕರ ಹೆಗಡೆ ದೊಡ್ನಳ್ಳಿ.

ಪ್ರಸರಣ - ಶ್ರೀ ಸ್ವರ್ಣವಲ್ಲೀ ಭಕ್ತವೃಂದ.